Description
ಭಾರತವು ಹಿಂದಿನಿಂದಲೂ ಮಹಾನ್ ಚಿಂತಕರು ಮತ್ತು ದಾರ್ಶನಿಕರಿಗೆ ಹೆಸರಾದ ನಾಡು. ಅವರ ಚಿಂತನೆಗಳು ಇಂದಿಗೂ ಜನರ ಬದುಕಿಗೆ ಮಾರ್ಗದರ್ಶಕವಾಗಿವೆ. ಕ್ರಿ.ಪೂ. 4ನೇ ಶತಮಾನದ ಚಾಣಕ್ಯ, ಕ್ರಿ.ಪೂ. 1ನೇ ಶತಮಾನದ ತಿರುವಳ್ಳುವರ್, ಕ್ರಿ.ಶ. 12ನೇ ಶತಮಾನದ ಬಸವಣ್ಣ ಸೇರಿದಂತೆ ಹಲವರು ಇಂಥವರಲ್ಲಿ ಸೇರಿದ್ದಾರೆ. ಜೀವನ, ನಾಯಕತ್ವ, ನೈತಿಕತೆ ಮತ್ತು ಮಾನವ ನಡೆ-ನುಡಿಗಳ ಕುರಿತು ಅಮೂಲ್ಯವಾದ ಜೀವನದರ್ಶನವನ್ನು ಅವರುಗಳು ನೀಡಿದ್ದಾರೆ. ಇಂದು ನಾವು ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಬದುಕುತ್ತಿರುವಾಗ ದೇಶೀಯ ಬುದ್ಧಿಮತ್ತೆಯ ಮಹತ್ವ ಇವರುಗಳ ಪ್ರಸ್ತುತತೆಯಿಂದ ಮನವರಿಕೆಯಾಗುತ್ತದೆ. ತಿರುವಳ್ಳುವರ್ ಅವರ ತಿರುಕ್ಕುರಳ್ ಎಲ್ಲರನ್ನೂ ಸಮಾನವಾಗಿ ಸ್ಪರ್ಶಿಸುವ ಸಾರ್ವಕಾಲಿಕ ಶ್ರೇಷ್ಠ ಶಾಸ್ತ್ರೀಯ ಕೃತಿಗಳಲ್ಲಿ ಒಂದಾಗಿದೆ. ಆಡಳಿತ, ವ್ಯವಸ್ಥಾಪನೆ, ಶಿಸ್ತು ಮತ್ತು ವ್ಯಕ್ತಿತ್ವದ ಕುರಿತು ಅದರಲ್ಲಿ ಸೂಚಿತವಾಗಿರುವ ತತ್ವಗಳು ಈಗಿನ ಕಾಲಕ್ಕೂ ಅಷ್ಟೇ ಅರ್ಥಪೂರ್ಣವಾಗಿವೆ. ಈ ಕಾವ್ಯದಲ್ಲಿ ಪ್ರಸ್ತುತಪಡಿಸಿರುವ ವಿಷಯಗಳು ಇಂದಿನ ಕಾರ್ಪೊರೇಟ್ ವಲಯಕ್ಕೂ ಅನ್ವಯವಾಗುತ್ತವೆ. ಯೋಜನೆ ರೂಪಿಸುವಿಕೆ, ಸಂಘಟನೆ, ಹೊಣೆಗಾರಿಕೆಯ ಹಂಚಿಕೆ, ಕಾರ್ಯಗಳ ಮೇಲ್ವಿಚಾರಣೆ ಸೇರಿದಂತೆ ವ್ಯವಸ್ಥಾಪನೆಯ ಪ್ರತಿಯೊಂದು ಆಯಾಮವನ್ನೂ ತಿರುಕ್ಕುರಳ್ ಅತ್ಯಂತ ಸಂಕ್ಷಿಪ್ತ ಹಾಗೂ ಸ್ಪಷ್ಟವಾಗಿ ನಿರೂಪಿಸುತ್ತದೆ. ಈ ಪುಸ್ತಕದಲ್ಲಿ ಸಮಕಾಲೀನ ಉದಾಹರಣೆಗಳನ್ನು ತಿರುವಳ್ಳುವರ್ ಅವರ ಕುರಳ್ಗಳ ಬೆಳಕಿನಲ್ಲಿ ವಿಶ್ಲೇಷಿಸಿ ವಿಷಯಗಳನ್ನು ಹಂಚಿಕೊಳ್ಳಲಾಗಿದೆ. ಬರವಣಿಗೆಯ ಆಪ್ತ ಸಂವಾದಶೈಲಿ ಹಾಗೂ ಸರಳ ನಿರರ್ಗಳ ಅನುವಾದವು ಓದಿಸಿಕೊಳ್ಳಲು ಸಹಾಯಕವಾಗಿದೆ. ವ್ಯವಸ್ಥಾಪನಾ ಚಿಂತಕರಾದ ಪೀಟರ್ ಡ್ರಕ್ಕರ್ ಅಥವಾ ಫಿಲಿಪ್ ಕೋಟ್ಲರ್ ಅವರಿಗಿಂತ ಬಲುಹಿಂದೆಯೇ ತಿರುವಳ್ಳುವರ್ ಅದೆಷ್ಟು ಪರಿಣಾಮಕಾರಿ ತತ್ವಗಳನ್ನು ಸೂಚಿಸಿದ್ದಾರೆ ಎಂಬುದನ್ನು ಮನಗಂಡು ಆಶ್ಚರ್ಯವೂ ಆಗುತ್ತದೆ. ಉದ್ಯೋಗಿಗಳು, ಉದ್ಯೋಗದಾತರು, ವಿದ್ಯಾರ್ಥಿಗಳು, ಬೋಧಕರು ಹೀಗೆ ಎಲ್ಲರಿಗೂ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಸಂಬಂಧಗಳನ್ನು ಮತ್ತಷ್ಟು ಸಮೃದ್ಧಗೊಳಿಸಿಕೊಳ್ಳಲು ಪ್ರೇರಣೆಯಾಗುವ ಪ್ರಾಯೋಗಿಕ ಒಳನೋಟಗಳು ಇದರಲ್ಲಿವೆ.





Reviews
There are no reviews yet.